ಶನಿವಾರ, ಅಕ್ಟೋಬರ್ 29, 2016

ದೀಪಾವಳಿಯ ಶುಭಾಶಯಗಳು - 2016

 ದೀಪಾವಳಿ: ಬದುಕಿನ ಕತ್ತಲಿಗೆ ಬೆಳಕಿನ ಹಬ್ಬ


  ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಎಂದರೆ ಬೆಳಕು. ಬೆಳಕು ಇಲ್ಲದಿದ್ದರೆ ನಾವು ಜಗತ್ತಿನಲ್ಲಿ ಏನನ್ನೂ ಕಾಣಲಾರೆವು. ಜಗತ್ತು ನಮಗೆ ಕಾಣಬೇಕಾದರೆ ಬೆಳಕು ಬೇಕು.
ಬೆಳಕಿನ ಹಬ್ಬವೇ ‘ದೀಪಾವಳಿ’. ಜೀವನದುದ್ದಕ್ಕೂ ಬೆಳಕು ನಮ್ಮ ಜೊತೆಯಲ್ಲಿರಲಿ ಎನ್ನುವುದರ ಸಾಂಕೇತಿಕತೆಯೇ ದೀಪಾವಳಿ. ಬೆಳಕು ಎಂದರೆ ಜ್ಞಾನ, ಅರಿವು, ತಿಳಿವಳಿಕೆ.
 ಯಾವುದರಿಂದ ನಾವು ಜೀವನವನ್ನು ನೋಡಬಲ್ಲೆವೋ, ನಮ್ಮನ್ನು ನಾವು ಕಾಣಬಲ್ಲೆವೋ, ನಮ್ಮ ಹಿತಾಹಿತಗಳನ್ನು ಕಂಡುಕೊಳ್ಳಬಲ್ಲೆವೋ – ಅವೆಲ್ಲವೂ ಜ್ಞಾನವೇ ಹೌದು; ಅವೆಲ್ಲವೂ ಬದುಕಿನ ಹಾದಿಯಲ್ಲಿ ಒದಗಿದ ಬೆಳಕೇ ಹೌದು. ಬೆಳಕನ್ನು ದೇವರಿಗೂ ಸಮೀಕರಿಸಲಾಗಿದೆ; ‘ಪರಂಜ್ಯೋತಿ’ ಎಂದು ಆರಾಧಿಸಲಾಗಿದೆ.
 ಹೀಗೆ ನಮ್ಮ ಜೀವನಕ್ಕೂ ಬೆಳಕಿಗೂ ದೀಪಾವಳಿಗೂ ನೇರ ನಂಟಿದೆ. 
 ದೀಪಾವಳಿ ಹಬ್ಬವು ಒಂದು ದಿನದ ಹಬ್ಬವಲ್ಲ; ನಾಲ್ಕೈದು ದಿನಗಳ ಕಾಲ ಹಬ್ಬಿಕೊಂಡಿರುವ ಪರ್ವವಿದು. ಈ ದಿನಗಳಲ್ಲಿ ನಡೆಸುವ ವಿವಿಧ ಕಲಾಪಗಳಿಗೆ ಅನುಗುಣವಾಗಿ ದೀಪಾವಳಿಯನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ನರಕಚತುರ್ದಶೀ, ಬಲಿಪಾಡ್ಯಮೀ, ವೀರಪ್ರತಿಪದಾ, ಭಗಿನೀದ್ವತೀಯಾ, ಸೋದರಬಿದಿಗೆ – ಹೀಗೆ ಹಲವು ಹೆಸರುಗಳು ದೀಪಾವಳಿಗೆ.
 ದೀಪವಾಳಿಯನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿದ್ದರೂ ದೀಪೋತ್ಸವ, ದೀಪದ ಆರಾಧನೆ ಮಾತ್ರ ಎಲ್ಲೆಡೆ ಕಂಡುಬರುವ ಸಮಾನ ಆಚರಣೆಯಾಗಿದೆ.
 ಮನೆ, ಮಠ, ನದೀತೀರಗಳು, ಊರಿನ ರಸ್ತೆಗಳಲ್ಲಿ ದೀಪಗಳನ್ನು ಬೆಳಗುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಬಂದ ಆಚರಣೆಯಾಗಿದೆ.
 ದೀಪಾವಳಿಯ ಆರಂಭವಾಗುವುದು ನೀರು ತುಂಬುವ ಹಬ್ಬದೊಂದಿಗೆ; ಇದು ನರಕಚತುರ್ದಶಿಯ ಹಿಂದಿನ ದಿನ. ಸ್ನಾನದ ಪಾತ್ರೆಗಳನ್ನೂ ನೀರನ್ನು ಕಾಯಿಸುವ ಹಂಡೆಯನ್ನೂ ಶುದ್ಧವಾಗಿ ತೊಳೆದು, ಬಳಿಕ ಹಂಡೆಗೆ ನೀರನ್ನು ತುಂಬಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು.  
 ಅಂದು ಮನೆಯ ಹೊರಗೆ ದೀಪವನ್ನು ಬೆಳಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಪಮೃತ್ಯವಿನಿಂದ ಪಾರಾಗುತ್ತೇವೆ ಎನ್ನುವುದು ನಂಬಿಕೆ. ಮರುದಿನ, ಅಂದರೆ ನರಕಚತುರ್ದಶಿಯಂದು ಬ್ರಾಹ್ಮಮುಹೂರ್ತದಲ್ಲಿಯೇ ಎದ್ದು ಅಭ್ಯಂಗಸ್ನಾನವನ್ನು ಮಾಡಬೇಕು.
 ಈ ದಿನ ಬೆಳಗ್ಗೆ ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ನೆಲಸಿರುತ್ತಾರೆ; ಅವುಗಳನ್ನು ಬಳಸಿ ಸ್ನಾನ ಮಾಡುವವರು ಯಮಲೋಕದಿಂದ ಪಾರಾಗುತ್ತಾರೆ ಎಂದು ಪುರಾಣದ ಮಾತಿದೆ:
 ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಶ್ಚತುರ್ದಶೀಂ l 
ಪ್ರಾತಃಕಾಲೇ ತು ಯಃ ಕುರ್ಯಾತ್‌ ಯಮಲೋಕಂ ನ ಪಶ್ಯತಿ ll
 ಮರುದಿನ ಅಮಾವಾಸ್ಯೆ; ಅಂದು ಬೆಳಗ್ಗೆ ಎಣ್ಣೆಸ್ನಾನವನ್ನು ಮಾಡಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ನಮ್ಮ ಅಂತರಂಗದ ಮತ್ತು ಬಹಿರಂಗದ ಸಿರಿವಂತಿಕೆಗೆ ಸಂಕೇತ.
 ಲಕ್ಷ್ಮೀ ಸದಾ ನಮ್ಮ ಜೊತೆಯಲ್ಲಿದ್ದು ಬದುಕು ಶ್ರೀಮಂತವಾಗಿರಲಿ ಎಂಬ ಆಶಯದೊಂದಿಗೆ ಲಕ್ಷ್ಮೀಪೂಜೆಯನ್ನು ನೆರವೇರಿಸಬೇಕು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡುತ್ತಾರೆ.
 ಅಮಾವಾಸ್ಯೆಯ ಮರುದಿನವೇ ಬಲಿಪಾಡ್ಯಮಿ. ಅಂದು ಕೂಡ ಅಭ್ಯಂಗಸ್ನಾನವನ್ನು ಮಾಡಿ ಬಲೀಂದ್ರನನ್ನು ಪೂಜಿಸಲಾಗುತ್ತದೆ. ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಅವನ ಪರಿವಾರದೊಂದಿಗೆ ಪೂಜಿಸಲಾಗುವುದು.
 ಸೆಗಣಿಯಲ್ಲಿ ಕೋಟೆಯನ್ನು ನಿರ್ಮಿಸಿ, ಆ ಮೂಲಕ ಒಟ್ಟು ಬಲೀಂದ್ರನ ಸಾಮ್ರಾಜ್ಯವನ್ನೇ ಮತ್ತೆ ಸ್ಥಾಪಿಸಿ, ಅವನನ್ನು ಅರ್ಚಿಸುವ ಸಂಪ್ರದಾಯ ದೇಶದ ಕೆಲವು ಪ್ರಾಂತ್ಯಗಳಲ್ಲಿದೆ. ರಾತ್ರಿ ಹೂಗಳನ್ನು ಎರಚುತ್ತ ಬಲೀಂದ್ರನಿಗೆ ಜೈಕಾರ ಹಾಕಲಾಗುತ್ತದೆ.
 ದೀಪಾವಳಿಯ ಎಲ್ಲ ದಿನಗಳ ಆಚರಣೆಯ ಹಿನ್ನೆಲೆಯಲ್ಲೂ ಪೌರಾಣಿಕ ಪ್ರಸಂಗಗಳ ತಾತ್ವಿಕತೆಯಿದೆ.  ‘ನರಕಚತುರ್ದಶಿ’ಯಲ್ಲಿ ನರಕ ಎನ್ನುವುದು ನಮ್ಮ ಬದುಕಿನ ಎಲ್ಲ ಕಷ್ಟಗಳ ಸಾಂಕೇತಿಕತೆಯನ್ನು ನೋಡಬಹುದು.
 ಅಷ್ಟೇ ಅಲ್ಲದೆ, ಅದು ನರಕ ಎನ್ನುವ ರಾಕ್ಷಸನ್ನು ಶ್ರೀಕೃಷ್ಣನು ಸಂಹರಿಸಿದ ದಿನದ ಸಂಭ್ರಮಾಚರಣೆಯೂ ಹೌದು. ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಶ್ರೀಕೃಷ್ಣ ಕಾಪಾಡಿ, ಜೀವನವನ್ನು ಕೊಟ್ಟ ದಿನವೇ ನರಕಚತುರ್ದಶೀ. ಅಂದು –
 ನಮೋ ನರಕಸಂತ್ರಾಸರಕ್ಷಾಮಂಗಳಕಾರಿಣೇ l
ವಾಸುದೇವಾಯ ಶಾಂತಾಯ ಕೃಷ್ಣಾಯ ಪರಮಾತ್ಮನೇ ll – ಎಂದು ಶ್ರೀಕೃಷ್ಣನನ್ನು ಸ್ತುತಿಸಲಾಗುತ್ತದೆ.
 ಇನ್ನು ‘ಅಮಾವಾಸ್ಯೆ’. ಕತ್ತಲೆಗೆ ಸಂಕೇತವೇ ಅಮಾವಾಸ್ಯೆ. ನಮಗೆ ಏನನ್ನೂ ನೋಡಲಾಗದ ಸ್ಥಿತಿಯೇ ‘ಕತ್ತಲು’. ನಮ್ಮ ಜೀವನವನ್ನೇ ನಾವು ನೋಡಲಾಗದ ಸ್ಥಿತಿಯನ್ನು ಒಡ್ಡುವುದು ಯಾವುದೆಂದರೆ ಅದು ಬಡತನವೇ ಹೌದು.
 ಆದರೆ ಬಡತನ ಎಂದರೆ ಕೇವಲ ಆಸ್ತಿ–ಅಂತಸ್ತು, ಹಣ–ಒಡವೆಗಳು ಇಲ್ಲದಿರುವುದಷ್ಟೆ ಅಲ್ಲ; ವಿದ್ಯೆ, ಬುದ್ಧಿ, ಶಾಂತಿ, ಸಮಾಧಾನ, ತೃಪ್ತಿಗಳು ಇಲ್ಲದಿರುವುದೂ ಬಡತನವೇ ಸರಿ.
 ಈ ಎಲ್ಲ ಬಡತನಗಳಿಂದಲೂ ನಮ್ಮ ಮುಕ್ತಗೊಳಿಸಬಲ್ಲ ಶಕ್ತಿಯೇ ‘ಶ್ರೀಲಕ್ಷ್ಮೀ.’ ಹೀಗೆ ಕತ್ತಲಿನಲ್ಲಿ ಬೆಳಕನ್ನು ಕಾಣಬೇಕೆಂಬ ಮನೋಧರ್ಮವೇ ಜೀವನವನ್ನು ಕಟ್ಟಿಕೊಳ್ಳುವುದರ ಮೊದಲ ಹಂತ.
 ನಿರಂತರವಾಗಿ ನಮ್ಮ ಬದುಕನ್ನು ನೆಮ್ಮದಿ, ತೃಪ್ತಿ, ವಿವೇಕದ ಕಡೆಗೆ ನಡೆಸುವ ಸಂಕಲ್ಪಶಕ್ತಿಯನ್ನು ಕ್ರಿಯಾಶೀಲಗೊಳಿಸುವುದೇ ಅಮಾವಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುವುದರ ತಾತ್ಪರ್ಯ. 
 ‘ಬಲಿಪಾಡ್ಯಮಿ’ಯಂದು ಬಲಿ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಏಳು ಚಿರಂಜೀವಿಗಳಲ್ಲಿ ಒಬ್ಬನಾಗಿ ಬಲೀಂದ್ರನನ್ನು ಎಣಿಸಲಾಗಿದೆ:
 ಅಶ್ವತ್ಥಾಮಾ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ l
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ll
 ವಿಷ್ಣು ವಾಮನಾವತಾರದಲ್ಲಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ ಕಥೆ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈ ಕಥೆಗೆ ಹಲವು ನೆಲೆಗಳ ಅರ್ಥಗಳಿವೆ. ನಮ್ಮ ಅಹಂಕಾರವನ್ನು ಮೆಟ್ಟಿ, ಜೀವನವನ್ನು ರೂಪಿಸಿಕೊಳ್ಳುವ ಆಶಯವೂ ಈ ಕಥೆಯಲ್ಲಿದೆ.
 ಬದುಕು ಸರ್ವಕಾಲಕ್ಕೂ ಸಲ್ಲುವ ನೆಮ್ಮದಿಯ ನೆಲೆಯಾಗಲು, ಸೌಂದರ್ಯದ ಖನಿಯಾಗಲು ಅಹಂಕಾರತ್ಯಾಗ ಮುಖ್ಯ ಎಂಬ ಸಂದೇಶವನ್ನೂ ಈ ಕಥೆಯಲ್ಲಿ ಕಾಣಬಹುದಾಗಿದೆ.
 ಹೀಗೆ ದೀಪಾವಳಿ ಎನ್ನುವುದು ನಮ್ಮ ಬದುಕನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವಾಗಿದೆ. 
ಕೃಪೆ-ಎಸ್‌. ಸೂರ್ಯಪ್ರಕಾಶ ಪಂಡಿತ್‌ 

ಸೋಮವಾರ, ಅಕ್ಟೋಬರ್ 10, 2016

2016 ನವರಾತ್ರಿ ಹಾಗೂ ದಸರೆಯ ಶುಭಾಶಯಗಳು





ಶ್ರೀಮತಿ ಜಯಂತಿ ನಾರಾಯಣ ರವರ ಮನೆ ಗೊಂಬೆನೋಟ










ಶ್ರೀಮತಿ ಜಯಂತಿ ನಾರಾಯಣ ರವರ ಮನೆ ಗೊಂಬೆನೋಟ    

ಶ್ರೀಮತಿ ಜಯಂತಿ ನಾರಾಯಣ ರವರ ಮನೆ ಗೊಂಬೆನೋಟ












               
ಶ್ರೀಮತಿ ಕೃಷ್ಣವೇಣಿ  ರವರ ಮನೆ ಗೊಂಬೆನೋಟ
ಶ್ರೀಮತಿ ಕೃಷ್ಣವೇಣಿ  ರವರ ಮನೆ ಗೊಂಬೆನೋಟ
   ಶ್ರೀಮತಿ ಪದ್ಮಿನಿ ಕೃಶ್ಣಮೂರ್ತಿರವರ ಮನೆ ಗೊಂಬೆನೋಟ
ನೀವು ನೋಡಿರದ ಮೈಸೂರು 











***********************************************************





ಶುಕ್ರವಾರ, ಅಕ್ಟೋಬರ್ 7, 2016

ಜೀವನದ ಉತ್ಸವದಲ್ಲಿ ಶಕ್ತಿಯ ಆರಾಧನೆ

 ಜೀವನದ ಉತ್ಸವದಲ್ಲಿ ಶಕ್ತಿಯ ಆರಾಧನೆ

   ಶಕ್ತಿ ಎಂದರೆ ಕೇವಲ ದೈಹಿಕ ಬಲವಷ್ಟೇ ಅಲ್ಲ; ನಮ್ಮ ಅಂತರಂಗದ ದೃಢತೆಯೂ ಶಕ್ತಿಯ ಸ್ವರೂಪವೇ. ವಿದ್ಯೆ, ಸೌಂದರ್ಯ, ಧನ, ಧಾನ್ಯ, ಮನಸ್ಸು, ಬುದ್ಧಿ, ಕ್ರಿಯೆ, ಸಂಕಲ್ಪ,  – ಹೀಗೆ ಜೀವನದ ಒಂದೊಂದು ವಿವರವೂ ಶಕ್ತಿಯ ರೂಪವೇ ಹೌದು. ಶಕ್ತಿ ಎಂದರೆ ಕೇವಲ ಹೊರಗಿನಶಕ್ತಿಯಲ್ಲ; ಅದು ಅಂತರಂಗದ ಬಲವೂ ಹೌದು; ಅಂತರಂಗದ ಸೌಂದರ್ಯವೂ ಹೌದು. 
ಮನುಷ್ಯನ ಜೀವನದುದಕ್ಕೂ ಅನಿವಾರ್ಯವಾಗಿರುವಂಥದ್ದು ಶಕ್ತಿ. ಅವನ ಹುಟ್ಟಿನಿಂದ ಮೊದಲುಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ; ಅಷ್ಟೇಕೆ, ಇಡಿಯ ಸೃಷ್ಟಿಯೇ ಶಕ್ತಿಯಿಂದ ಆಗಿದೆ; ಶಕ್ತಿಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ; ಈಗಲೂ ಆರಾಧಿಸಲಾಗುತ್ತಿದೆ.
ಶಕ್ತಿಯನ್ನು ತಾಯಿಯಾಗಿ ಕಂಡು; ಆ ತಾಯಿಯನ್ನು ಜಗನ್ಮಾತೆಯಾಗಿ ಪೂಜಿಸಲಾಗುತ್ತದೆ. ತಾಯಿ ಎಂದರೆ ನಮ್ಮ ಹುಟ್ಟು; ನಮ್ಮನ್ನು ಪ್ರತಿ ಕ್ಷಣವೂ ಪ್ರೀತಿಯಿಂದಲೇ ಕಾಪಾಡುವವಳು. ಶಕ್ತಿಯನ್ನು ಈ ಹಿನ್ನೆಲೆಯಲ್ಲಿ ಕಂಡಿರುವುದು ನಮ್ಮ ಸಂಸ್ಕೃತಿಯ ಹಿರಿಮೆ, ಪ್ರಕೃತಿಯನ್ನೇ ತಾಯಿಯ ರೂಪದಲ್ಲಿ ಭಾವಿಸಿಕೊಂಡಿರುವುದು ಕೂಡ ಇಲ್ಲಿ ಗಮನಾರ್ಹ.

ಮಕ್ಕಳ ಅಭಿವೃದ್ಧಿಯನ್ನು ಕಂಡು ಸಂತಸ ಪಡುವ ತಾಯಿ, ಅದೇ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸಲೂ ಮುಂದಾಗುತ್ತಾಳೆ; ಹೀಗೆ ಮಾಡುವುದು ಕೂಡ ಮಕ್ಕಳ ಒಳಿತಿಗಾಗಿಯೇ. ಜಗನ್ಮಾತೆಯನ್ನು ಈ ವಿಧದಲ್ಲೂ ಕಾಣಲಾಗಿದೆ.

ಶರತ್ಕಾಲದಲ್ಲಿ ಆಚರಿಸುವ ನವರಾತ್ರಿ (ಸರಿಯಾದ ರೂಪ ‘ನವರಾತ್ರ’)ಯಲ್ಲಿ ಜಗನ್ಮಾತೆಯ ಹಲವು ಸ್ವರೂಪಗಳನ್ನು ಪೂಜಿಸಲಾಗುತ್ತದೆ. ಇದರಲ್ಲಿ ಅವಳ ಸೌಮ್ಯರೂಪವೂ ಇದೆ; ಉಗ್ರರೂಪವೂ ಇದೆ. ನಮ್ಮ ಜೀವನ ಹೇಗೆ ಶಕ್ತಿಯಿಂದ ತುಂಬಿದೆ ಎನ್ನುವುದಕ್ಕೂ ಈ ಹಬ್ಬ ಸಂಕೇತದಂತಿದೆ.

ಶಕ್ತಿ ಎಂದರೆ ಕೇವಲ ದೈಹಿಕ ಬಲವಷ್ಟೇ ಅಲ್ಲ; ನಮ್ಮ ಅಂತರಂಗದ ದೃಢತೆಯೂ ಶಕ್ತಿಯ ಸ್ವರೂಪವೇ. ವಿದ್ಯೆ, ಸೌಂದರ್ಯ, ಧನ, ಧಾನ್ಯ, ಮನಸ್ಸು, ಬುದ್ಧಿ, ಕ್ರಿಯೆ, ಸಂಕಲ್ಪ,  – ಹೀಗೆ ಜೀವನದ ಒಂದೊಂದು ವಿವರವೂ ಶಕ್ತಿಯ ರೂಪವೇ ಹೌದು. ಶಕ್ತಿ ಎಂದರೆ ಕೇವಲ ಹೊರಗಿನಶಕ್ತಿಯಲ್ಲ; ಅದು ಅಂತರಂಗದ ಬಲವೂ ಹೌದು; ಅಂತರಂಗದ ಸೌಂದರ್ಯವೂ ಹೌದು.

ಇವೆಲ್ಲವನ್ನೂ ಪ್ರತಿನಿಧಿಸುವಂತೆ ನವರಾತ್ರಿಯ ಆಚರಣೆ ರೂಪುಗೊಂಡಿದೆ. ಈ ಸಂದರ್ಭದಲ್ಲಿ ದುರ್ಗಾಪಾರಾಯಣ, ರಾಮಾಯಣದ ಪಾರಾಯಣಗಳನ್ನೂ ನಡೆಸುವುದುಂಟು. ಪಾರಾಯಣ ಎಂದರೆ ಗ್ರಂಥವೊಂದು ನಮ್ಮ ಜೀವನದ ಭಾಗವಾಗುವುದು ಎಂದರ್ಥ; ಆ ಆದರ್ಶದಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಎಂದರ್ಥ.

ನವರಾತ್ರಿಯನ್ನು ಒಂಬತ್ತು ದಿನಗಳಿಗೆ ಸೀಮಿತಮಾಡದೆ ಅದನ್ನು ಹತ್ತನೆಯ ದಿನಕ್ಕೂ ವಿಸ್ತರಿಸಿರುವುದು ವಿಶೇಷ. ಹತ್ತನೆಯ ದಿನವನ್ನು ‘ವಿಜಯದಶಮಿ’ ಎಂದು ಕರೆದಿರುವುದು ಕೂಡ ಸ್ವಾರಸ್ಯಕರವಾಗಿದೆ. ನಮ್ಮ ಅಂತರಂಗವೂ ಬಹಿರಂಗವೂ ಶಕ್ತಯುತವಾಗಿದ್ದರೆ ಜೀವನದಲ್ಲಿ ಜಯ ಸಿಗುವುದು ಖಂಡಿತವಷ್ಟೆ.

***
ನವದುರ್ಗೆಯರು

ನವರಾತ್ರಿಯಲ್ಲಿ ಪೂಜಿತರಾಗುವರು ನವದುರ್ಗೆಯರು; ಇವರು ಶಕ್ತಿಯ ಬೇರೆ ಬೇರೆ ರೂಪಗಳು. ದುರ್ಗೆಯ ರೂಪಗಳು ಅನಂತ. ಆದರೆ ಅವಳು ಪ್ರತಿನಿಧಿಸುವ ಶಕ್ತಿಯ ಎಲ್ಲ ರೂಪಗಳ ಸಂಕೇತವಾಗಿ ನವರಾತ್ರಿಯಂದು ಅವಳ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ.

*
ಶೈಲಪುತ್ರೀ

ಮೊದಲನೆಯ ದಿನ ಪೂಜಿತವಾಗುವ ದೇವಿಯ ಹೆಸರು ಶೈಲಪುತ್ರೀ. ಪರ್ವತರಾಜ ಹಿಮವಂತನ ಮಗಳಾಗಿ ದೇವಿ ಅವತರಿಸಿದ ಕಾರಣ ಅವಳನ್ನು ‘ಶೈಲಪುತ್ರೀ’ ಎಂದು ಕರೆಯುತ್ತಾರೆ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ವಂದೇ ವಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್‌ l
ವೃಷಾರೂಢಾಂ ಶೂಲಧರಾಂ ಶೈಲಪುತ್ರೀ
ಯಶಸ್ವಿನೀಮ್‌ ll

ವೃಷಭವಾಹನೆಯಾದ ಶೈಲಪುತ್ರಿಯು ಬಲಗೈಯಲ್ಲಿ ತ್ರಿಶೂಲವನ್ನು ಮತ್ತು ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಅವಳು ಬೇಡಿದ ವರವನ್ನು ನೀಡುವವಳು. ಹಿಂದಿನ ಜನ್ಮದಲ್ಲಿ ಪ್ರಜಾಪತಿಯಾದ ದಕ್ಷನ ಮಗಳಾಗಿ ಹುಟ್ಟಿದ್ದಳು.
ಅವಳ ಪತಿ ಶಿವನಿಗೆ ಎದುರಾದ ಅಪಮಾನವನ್ನು ಸಹಿಸದೆ ತನ್ನ ದೇಹವನ್ನೇ ಅಗ್ನಿಗೆ ಅರ್ಪಣೆ ಮಾಡಿದಳು. ಮುಂದೆ ಅವಳೇ ‘ಪಾರ್ವತೀ’ ರೂಪದಲ್ಲಿ ಜನಿಸಿದಳು. ‘ಹೈಮವತೀ’ ಎಂಬ ಇನ್ನೊಂದು ಹೆಸರೂ ಅವಳಿಗುಂಟು.

*
ಬ್ರಹ್ಮಚಾರಿಣೀ

ಎರಡನೆಯ ದಿನ ಪೂಜಿತವಾಗುವ ದೇವಿಯ ಹೆಸರು ‘ಬ್ರಹ್ಮಚಾರಿಣೀ’. ‘ಬ್ರಹ್ಮ ’ ಎಂದರೆ ತಪಸ್ಸು ಎಂದರ್ಥ; ಸದಾ ಕಾಲ ಅವಳು ತಪಸ್ಸಿನಲ್ಲಿರುವುದರಿಂದ ಅವಳಿಗೆ ಈ ಹೆಸರು ಬಂದಿದೆ. ಬಲಗೈಯಲ್ಲಿ ಜಪಮಾಲೆಯನ್ನೂ ಎಡಗೈಯಲ್ಲಿ ಕಮಂಡಲವನ್ನೂ ಹಿಡಿದಿದ್ದಾಳೆ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ l
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ll

ಶಿವನನ್ನು ವರಿಸಿದಳು ಹಿಮವಂತನ ಪುತ್ರಿಯಾಗಿ ಜನಿಸಿದ ದೇವಿ ಕಠಿಣ ತಪಸ್ಸನ್ನು ಮಾಡಿದಳು. ಹೀಗಾಗಿ ಅವಳಿಗೆ ಈ ಹೆಸರು ಬಂದಿತು. ಮಗಳ ತಪಸ್ಸಿನ ತೀವ್ರತೆಯನ್ನು ನೋಡಿ ‘ನೋಡು! ಬೇಡ!!’ – ತಪಸ್ಸು ಬೇಡ ( ಉಮಾ) – ಎಂದು ಮೇನಾದೇವಿ ಹೇಳಿದಳಂತೆ; ಆದುದರಿಂದ ‘ಉಮಾ’ ಎಂಬ ಹೆಸರನ್ನೂ ಪಡೆದಳು.

*
ಚಂದ್ರಘಂಟಾ

ಮೂರನೆಯ ದಿನ ಪೂಜಿವಾಗುವ ದೇವಿಯ ಹೆಸರು ಚಂದ್ರಘಂಟಾ. ಸಿಂಹವಾಹನೆಯಾಗಿರುವ ಅವಳು ಯುದ್ಧಕ್ಕೆ ಸಿದ್ಧಳಾದ ಸ್ಥಿತಿಯಲ್ಲಿರುತ್ತಾಳೆ. ಯುದ್ಧಕ್ಕೆ ಬೇಕಾದ ಅಸ್ತ್ರಶಸ್ತ್ರಗಳನ್ನು ಹತ್ತು ಕೈಗಳಲ್ಲಿ ಹಿಡಿದಿದ್ದಾಳೆ. ಇವಳ ತಲೆಯಲ್ಲಿ ಗಂಟೆಯ ಆಕಾರದಲ್ಲಿ ಚಂದ್ರನಿದ್ದಾನೆ. ಗಂಟೆಯ ನಾದದಿಂದಲೇ ಅವಳು ದುಷ್ಟರನ್ನು ನಿಗ್ರಹಿಸುತ್ತಾಳೆ. ಚಂದ್ರಘಂಟಾದೇವಿಯ ಧ್ಯಾನಶ್ಲೋಕ ಹೀಗಿದೆ:

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ l
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ l

*
ಕೂಷ್ಮಾಂಡಾ

ನಾಲ್ಕನೆಯ ದಿನ ಪೂಜಿತವಾಗುವ ದೇವಿ ‘ಕಾಷ್ಮಾಂಡಾ.’ ಅಂಡ ಎಂದರೆ ಬ್ರಹ್ಮಾಂಡ; ಸೃಷ್ಟಿ. ಇಡಿಯ ಸೃಷ್ಟಿಯೇ ದೇವಿಯಿಂದಾಗಿದೆ; ಆದುದರಿಂದ ಅವಳು ‘ಕಾಷ್ಮಾಂಡಾ’. ಅವಳು ತನ್ನ ನಗುವಿನಿಂದಿಲೇ ಜಗತ್ತನ್ನು ಸೃಷ್ಟಿಸಿದಳಂತೆ. ಕೈಯಲ್ಲಿ ಅಮೃತಕಲಶವನ್ನು ಹಿಡಿದಿದಿರುವ ದೇವಿ ಕೂಷ್ಮಾಂಡಾಳ ವಾಹನ ಸಿಂಹ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ  l
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ll

*
ಸ್ಮಂದಮಾತಾ

ಐದನೆಯ ದಿನ ದುರ್ಗೆಯನ್ನು ‘ಸ್ಕಂದಮಾತಾ’ ರೂಪದಲ್ಲಿ ಪೂಜಿಸಲಾಗುತ್ತದೆ. ‘ಸ್ಕಂದ’ ಎಂದರೆ ಸುಬ್ರಹ್ಮಣ್ಯನ ತಾಯಿಯಾದುದರಿಂದ ಜಗನ್ಮಾತೆಗೆ ಈ ಹೆಸರು ಬಂದಿದೆ. ಸುಬ್ರಹ್ಮಣ್ಯನಿಗೆ ಹಲವು ಹೆಸರುಗಳು; ಅವುಗಳಲ್ಲಿ ಒಂದು ‘ಕುಮಾರ’.

ಅವನು ದೇವತೆಗಳ ಸೇನಾಪತಿ. ಸಿಂಹವಾಹನೆಯಾಗಿರುವ ಸ್ಕಂದಮಾತಾ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳರಿಸಿಕೊಂಡಿದ್ದಾಳೆ. ಅವಳ ಧ್ಯಾನಶ್ಲೋಕ ಹೀಗಿದೆ:

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾಮ್‌ l
ಶುಭಸ್ತದಾ ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ll

*
ಕಾತ್ಯಾಯನೀ

ದುರ್ಗೆಯ ಆರನೆಯ ಸ್ವರೂಪವೇ ‘ಕಾತ್ಯಾಯನೀ.’ ಮಹಿಷಾಸುರನ ಸಂಹಾರಕ್ಕೆಂದು ದೇವಿ ರೂಪತಾಳಿದಾಗ ಅವಳನ್ನು ಮೊದಲು ಪೂಜಿಸಿದ್ದು ಮಹರ್ಷಿ ಕಾತ್ಯಾಯನ. ಹೀಗಾಗಿ ಅವಳಿಗೆ ‘ಕಾತ್ಯಾಯಿನೀ’ ಎಂಬ ಹೆಸರು ಬಂದಿತು. ಸಿಂಹವಾಹನೆಯಾದ ಅವಳು ಕೈಯಲ್ಲಿ ಖಡ್ಗವನ್ನು ಹಿಡಿದ್ದಾಳೇ. ಅವಳ ಧ್ಯಾನಶ್ಲೋಕ ಹೀಗಿದೆ:

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ l
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ll


*
ಕಾಲರಾತ್ರೀ

ದುರ್ಗೆಯ ಏಳನೆಯ ಸ್ವರೂಪವೇ ‘ಕಾಲರಾತ್ರೀ’. ಇವಳು ನೋಡಲು ಭಯಂಕರಸ್ವರೂಪಳು; ಮೂರು ಕಣ್ಣನ್ನು ಹೊಂದಿದವಳು. ಆದರೆ ಅವಳು ಎಲ್ಲರಿಗೂ ಒಳ್ಳೆಯದನ್ನೇ ಮಾಡುವವಳು. ಅವಳ ವಾಹನ ಕತ್ತೆ. ತಾಯಿ ಕಾಲರಾತ್ರಿಯ ಧ್ಯಾನಶ್ಲೋಕ ಹೀಗಿದೆ:

ಏಕವೇಣೀ ಜಪಾಕರ್ಣಪೂರ ನಗ್ನಾ ಖರಸ್ಥಿತಾ l
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ll
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ l
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ll


*
ಮಹಾಗೌರೀ

ಎಂಟನೆಯ ದಿನ ಪೂಜಿತವಾಗುವ ದುರ್ಗೆಯ ರೂಪವೇ ಮಹಾಗೌರೀ. ಬಿಳಿಯ ಬಣ್ಣದಲ್ಲಿರುವುದರಿಂದ ದೇವಿಗೆ ಈ ಹೆಸರು ಬಂದಿದೆ. ಬಿಳಿ ಎನ್ನುವುದು ಶುದ್ಧತ್ವಕ್ಕೆ ಸಂಕೇತ. ಅವಳ ವಾಹನ ಬಿಳಿಯ ಎತ್ತು. ಅವಳ ಧ್ಯಾನಶ್ಲೋಕ ಹೀಗಿದೆ:

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ll

*
ಸಿದ್ಧಿದಾತ್ರೀ

ದೇವಿಯ ಒಂಬತ್ತನೆಯ ರೂಪವೇ ಸಿದ್ಧಿದಾತ್ರೀ. ಅವಳು ಎಲ್ಲ ಬಗೆಯ ಸಿದ್ಧಿಗಳನ್ನೂ ಕೊಡುವವಳು; ಹೀಗಾಗಿ ಅವಳಿಗೆ ಈ ಹೆಸರು ಬಂದಿದೆ. ಅವಳ ಧ್ಯಾನಶ್ಲೋಕ ಹೀಗಿದೆ:

ಸಿದ್ಧಗಂದರ್ವಯಕ್ಷಾದ್ಯೈರಸುರೈರಮರೈರಪಿ l
ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ ll

(ಪ್ರಜಾವಾಣಿ ಕೃಪೆ )

ಗುರುವಾರ, ಅಕ್ಟೋಬರ್ 6, 2016

ಬೊಂಬೆ ಸಡಗರ


 ಶ್ರೀಮತಿ ವಸಂತಲಕ್ಷ್ಮಿರವರ ಮನೆಯ ಬೊಂಬೆ ವಿಡಿಯೊ

ಶ್ರೀಮತಿ ವಿಜಯಾ ಬಿ.ಕೆ.ಪ್ರಸನ್ನ ರವರ ಮನೆಯ ಬೊಂಬೆ ಸಡಗರ

   




 








*************************************************

ಶನಿವಾರ, ಅಕ್ಟೋಬರ್ 1, 2016

ಮೆಟ್ಟಿಲ ಮಾಡಿ, ಪುಟ್ಟ ಬೊಂಬೆಗಳಿಟ್ಟು... ಆಹಾ ಅದ್ಭುತ ಶೀರ್ಷಿಕೆ

2016ರ ದಸರೆಯ ಶುಭಾಶಯಗಳು
(ಶ್ರೀನಿವಾಸ್  ಬೆಂಗಳೂರು ಅವರ ಕ್ಷಮೆಕೋರುತ್ತಾ....)
ಇಂದು ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ! 


ಅವರದೇ... ನವರಾತ್ರಿ ಹಬ್ಬಕ್ಕೊಂದು ಆರತಿಯ ಹಾಡಿನೊಂದಿಗೆ... ಈ 2016ರ ದಸರೆಯ ಶುಭಾಶಯಗಳು
ಮೆಟ್ಟಿಲ ಮಾಡಿ
ಪುಟ್ಟ-ಬೊಂಬೆಗಳಿಟ್ಟು
ಬೆಳಗಿರರಾರತಿಯ ನಾರಿಯರೇ...

ಕಲಶವನು ಮಾಡಿ
ತಿಲಕವನು ಇಟ್ಟು
ಬೆಳಗಿರರಾರತಿಯ ನಾರಿಯರೇ...

ಹೊತ್ತಿಗೆಯನಿಟ್ಟು
ಬತ್ತಿ-ದೀಪವನಿಟ್ಟು
ಬೆಳಗಿರಾರತಿಯ ನಾರಿಯರೇ...

ಆಯುಧವನಿಟ್ಟು
ಪಾಯಸವ ಕೊಟ್ಟು
ಬೆಳಗಿರಾರತಿಯ ನಾರಿಯರೇ...

ಅಕ್ಕ-ಪಕ್ಕದ ಮನೆಯ
ಚಿಕ್ಕ ಮಕ್ಕಳ ಕರೆದು
ಬೆಳಗಿರಾರತಿಯ ನಾರಿಯರೇ...

ಮಕ್ಕಳಾ ಬಾಯಿಗೆ
ಚಿಕ್ಕ-ಚಕ್ಕುಲಿಯಿಟ್ಟು
ಬೆಳಗಿರಾರತಿಯ ನಾರಿಯರೇ...

ಕಹಿ ನೆನಪುಗಳ ಸರಿಸಿ
ಸಿಹಿ ಹೂರಣವಿಟ್ಟು
ಬೆಳಗಿರಾರತಿಯ ನಾರಿಯರೇ...

ಶಕ್ತಿ ದೇವತೆಯರನು
ಭಕ್ತಿಯಿಂದಲಿ ಭಜಿಸಿ


ಬೆಳಗಿರಾರತಿಯ ನಾರಿಯರೇ...
ಹೇಮ ಮನೆಯ ಗೊಂಬೆ
ನವರಾತ್ರಿ ಹಬ್ಬಕ್ಕೆ
ನವದೇವಿಯರ ನೆನೆದು
ಬೆಳಗಿರಾರತಿಯ ನಾರಿಯರೇ...

ವಸಂತ ಮನೆಯ ಗೊಂಬೆ
**************************************************************************

ಭಾನುವಾರ, ಸೆಪ್ಟೆಂಬರ್ 18, 2016

10ನೇ ವಾರ್ಷಿಕ ಸರ್ವಸದಸ್ಯರ ಸಭೆ- 2016 - ಸಂಪೂರ್ಣ ವರದಿ


10ನೇ ವಾರ್ಷಿಕ  ಸರ್ವಸದಸ್ಯರ ಸಭೆ- 2016  



  ದಿನಾಂಕ-11-09-2016 ರಂದು   10ನೇ ವಾರ್ಷಿಕ ಸರ್ವಸದಸ್ಯರ ಸಭೆಯು, ಸದಸ್ಯರುಗಳ ಪರಸ್ಪರ ಕ್ಷೇಮ-ಕುಶಲೋಪರಿ,ಬೆಳಗಿನ ಉಪಾಹಾರ ಸೇವನೆಯ ನಡುವೆ ಬೆ.10-30ಕ್ಕೆ ಕು||ಅಮೃತ ಮೈಸೂರು ರವರ ನಿರೂಪಣೆ ಮೂಲಕ ಕು||ಅಭಿಘ್ನ ರವರ ದೇವತಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

  ಶ್ರೀಮತಿ ಬಿ.ಕೆ.ಜಯಲಕ್ಷ್ಮಿ ರವರು ಆದಿವಂದ್ಯ ಗಣಪನು ಸರ್ವಸದಸ್ಯರ ಮನದಲ್ಲೂ ನೆಲೆಸುವ ಹಾಗೆ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀ ಸುದರ್ಶನ್ ಮೈಸೂರು ರವರು ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯದರ್ಶಿಯವರಾದ ಶ್ರೀಮತಿ ವಸಂತಲಕ್ಷ್ಮಿ ವಾರ್ಷಿಕ ವರದಿ ಓದಿದರು. ಖಜಾಂಚಿಗಳ ಪರವಾಗಿ ಶ್ರೀಕೃಷ್ಣಮೂರ್ತಿಯವರು ಹಣಕಾಸು ವಿವರ ನೀಡಿದರು.

   10ನೇ ವಾರ್ಷಿಕ ಸರ್ವಸದಸ್ಯರ ಸಭೆಯು ಕೂಟವು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದರ ಸುಸಂದರ್ಭವಾಗಿದ್ದು, ಅದರ ನೆನಪಿನಾರ್ಥ ಹೊರತಂದ ಬೇರು ಬಿಳಲುಸ್ಮರಣಸಂಚಿಕೆಯನ್ನು, ಕೂಟದ ಹಿರಿಯ ಸದಸ್ಯರಾದ  ಶ್ರೀಮತಿ ವಿಮಲಮ್ಮನವರು ತಮ್ಮ ಅಮೃತಹಸ್ತದಿಂದ ಬಾರೀ ಕರತಾಡನಗಳ ನಡುವೆ ಬಿಡುಗಡೆಗೊಳಿಸಿದರು.ಸದಸ್ಯರೆಲ್ಲಾ ಸಂಚಿಕೆಯನ್ನು ತುಂಬು ಹೃದಯದಿಂದ ಸ್ವಾಗತಿಸಿ ಹೆಮ್ಮೆಪಟ್ಟರು. ಸ್ಮರಣಸಂಚಿಗೆ ಅರ್ಥಪೂರ್ಣ ಹೆಸರು ನೀಡಿದ ಶ್ರೀ ಸಂದೀಪ್ ರವರಿಗೆ ಧನ್ಯವಾದ ಸಲ್ಲಿಸಲಾಯಿತು.

  ನಂತರ ಕೂಟದ ಹಿರಿಯ ಸದಸ್ಯರಾದ ಶ್ರೀಮತಿ ಕೃಷ್ಣವೇಣಿರವರನ್ನು ಕೂಟದ ಅಧ್ಯಕ್ಷರಾದ ನಾ.ನಾರಾಯಣರವರು  ವೇದಿಕೆಯಲ್ಲಿದ್ದವರ ಸಹಕಾರದೊಂದಿಗೆ ಸನ್ಮಾ ನಿಸಿದರು. ಸನ್ಮಾನಿತರನ್ನು ಕುರಿತು ಮಾತನಾಡಿದ ಅಧ್ಯಕ್ಷರು,  ತಮ್ಮ ಹಿರಿಯ ಸಹೋದರಿಯವರೊಂದಿಗೆ ತಮ್ಮ ಬಾಲ್ಯದ ದಿನಗಳು ಹೇಗಿದ್ದವು ಎಂಬುದನ್ನು  ಎಳೆಎಳೆಯಾಗಿ ಬಿಡಿಸಿಟ್ಟು ಸಹೋದರಿಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ಮಕ್ಕಳಾದ ಶ್ರೀಮತಿ ವೀಣ ಮತ್ತು ಮನೋರಮ ರವರು ಮಾತನಾಡಿ ಕೆಟ್ಟ ಮಗ ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ  (कुपुत्रो जायेत क्वचिदपि कुमाता न भवति ।)ಎಂಬ ಆಚಾರ್ಯರ ಮಾತುಗಳನ್ನು ನೆನಪಿಸುವಂತೆ ತಮ್ಮ ತಾಯಿ ತಮ್ಮ ಬಾಳಿನಲ್ಲಿ ಹೇಗೆ ನೋವನ್ನು ನುಂಗಿ ನಗುವನ್ನು ಹಂಚಿ ಎಲ್ಲ ತಾಯಂದಿರ ನಡುವೆಯೂ ತಮ್ಮ ತಾಯಿಯವರೇ ದೊಡ್ಡವರಾಗಿ ಕಾಣಿಸುತ್ತಾರೆ ಎಂಬುದನ್ನು ಭಾವನಾತ್ಮಕವಾಗಿ ಹಂಚಿಕೊಂಡರು.ಸಭೆಯಲ್ಲಿದ್ದ ಸದಸ್ಯರುಗಳೆಲ್ಲಾ ಆ ಕ್ಷಣ ತಮ್ಮ ತಮ್ಮ ತಾಯಿಯವರನ್ನು ಸಹಾ ನೆನಪಿಸಿಕೊಳ್ಳುವುದಕ್ಕೆ ಇದು ಅನುವು ಮಾಡಿಕೊಟ್ಟಿತು. ಅಳಿಯಂದಿರಾದ ಶ್ರೀ ಸುಬ್ಬರಾವ್ ರವರು ತಮ್ಮ ಅತ್ತೆಯವರನ್ನು ತಾವು ತಾಯಿಯೆಂದೇ ಭಾವಿಸಿರುವುದಾಗಿ ಅಭಿಮಾನ ವ್ಯಕ್ತಪಡಿಸಿದರು.ಶ್ರೀಮತಿ ಪದ್ಮಿನಿ ಕೃಷ್ಣಮೂರ್ತಿ ಕುಟುಂಬವು ಈ ಸನ್ಮಾನದ ಖರ್ಚನ್ನು ಪ್ರಾಯೋಜಿಸಿತ್ತು.

  ಸದಸ್ಯರೆಲ್ಲಾ ಎಳೆಯರನ್ನೂ ಮೀರಿಸುವಂತೆ ನಂತರ ನಡೆದ ಆಟೋಟಗಳಲ್ಲಿ   ಭಾಗವಹಿಸಿದ್ದು ಚೇತೋಹಾರಿಯಾಗಿತ್ತು. ಹಿರಿಯ-ಕಿರಿಯ ಸದಸ್ಯರುಗಳೆಲ್ಲಾ ರಂಜನೀಯವಾಗಿ ಹರಟೆ,ಕೇಕೆ,ಹಾಸ್ಯಗಳನ್ನು ಮಾಡುತ್ತಾ ಸಭೆಗೆ ಕಳೆ ತುಂಬಿದರು. ಹಿರಿಯ-ಕಿರಿಯರೆನ್ನದೆ ಸದಸ್ಯರು ಸ್ವಪ್ರೇರಣೆಯಿಂದ ಮಧ್ಯಾಹ್ನದ ಭೋಜನ ಕಾರ್ಯದಲ್ಲಿ ಭಾಗವಹಿಸಿದ್ದು ಒಂದು  ಮಾದರಿಯಾಗಿತ್ತು. ಶ್ಲೋಕ-ದೇವರ ನಾಮ ಸ್ಮರಣೆಯ ನಡುವೆ ರುಚಿಯಾದ ಭೋಜನವನ್ನು ಎಲ್ಲರೂ ಸವಿದರು.

  ಪತಿ-ಪತ್ನಿಯರ ನಡುವೆ ಎಷ್ಟು ಪರಸ್ಪರ ತಿಳಿವಳಿಕೆಯಿದೆ ಎಂದು ಪರೀಕ್ಷಿಸುವ ಸಲುವಾಗಿ ನಡೆದ ಸ್ಪರ್ಧೆಯ ಪ್ರಶ್ನೋತ್ತರದಲ್ಲಿ ಕಂಡ ತುಂಟತನದ ಅಂಶಗಳನ್ನು ಸೋದಾಹರಣವಾಗಿ ಪ್ರಸ್ತಾಪಿಸುತ್ತಾ, ಸದಸ್ಯರುಗಳ ಮೈಮನಗಳಲ್ಲಿ ಮಿಂಚು ಪುಳಕಗಳ ಹುಯಿಲೆಬ್ಬಿಸಿ ಅಪರಾಹ್ನದ ಸಭೆಯನ್ನು ಆರಂಭಿಸಲಾಯಿತು.ಸದಸ್ಯರು ಇನ್ನಿಲ್ಲದ ಹರ್ಷ ತೋರಿಸಿದರು. ಸ್ಮರಣಸಂಚಿಕೆ ಹೊರತರಲು ಶ್ರಮಿಸಿದ ಶ್ರೀ ಪ್ರಸನ್ನರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  ವೃತ್ತಿ-ಪ್ರವೃತ್ತಿ ಮಾಲಿಕೆ-2 ರಲ್ಲಿ ಮೊದಲಿಗೆ ನಾ.ನಾರಾಯಣ ರವರು ಭಾಗವಹಿಸಿ ಅವರ ವೃತ್ತಿ ಜೀವನದ ಅನೇಕ ಘಟನೆಗಳಲ್ಲಿ ಎಂಥ ಸನ್ನಿವೇಶಗಳು ಸೃಷ್ಟಿಯಾದರೂ ತಾವು ಹೇಗೆ ನ್ಯಾಯದ ಪರವಾಗಿಯೇ ಇದ್ದುದನ್ನು, ಅವರ ವೃತ್ತಿ ಜೀವನದ ಅನೇಕ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತಾ ವಿವರಿಸಿದರು. ಸದಸ್ಯರು ಅನೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು. ಪ್ರವೃತ್ತಿ ವಿಭಾಗದಲ್ಲಿ ಶ್ರೀಮತಿ ಪದ್ಮಿನಿ ಕೃಷ್ಣಮೂರ್ತಿಯವರನ್ನು ಅವರ ಪಾಕ ಪ್ರಾವೀಣ್ಯತೆ ಹಾಗೂ ಕುಶಲ ಕಲೆಗಳಲ್ಲಿನ ಅವರ ಸಾಧನೆ, ಮತ್ತು ಅವರ ಕಲಿಕೆಯ ಅಗಾಧ ಆಸಕ್ತಿ ಬಗ್ಗೆ ಹಲವರು ರಂಜನೀಯವಾಗಿ ಪ್ರಶ್ನಿಸಿದರು. ಅದಕ್ಕೆ ತಮ್ಮ ಎಂದಿನ ಅಷ್ಟೇ ಉತ್ಸಾಹ ಮುಗ್ಧ ನಗುಮೊಗದಿಂದ ಉತ್ತರಿಸಿ ಸಭೆಗೆ ಹೆಚ್ಚು ರಂಗು ತುಂಬಿಸಿದರು.
  ಅಧ್ಯಕ್ಷರಾದ ಶ್ರೀ ನಾ.ನಾರಾಯಣ ಮತ್ತು  ಶ್ರೀಕೃಷ್ಣಮೂರ್ತಿಯವರು ಕೂಟದ ಉತ್ತೇಜಕ ನಗದು ಬಹುಮಾನವನ್ನು ಕು||ಅನಿಲ್ ಕಶ್ಯಪ್ (ಎಸ್.ಎಸ್.ಎಲ್.ಸಿ.) ಕು||ಹರಿಣಿ(ಪಿ.ಯು.ಸಿ) ಯವರಿಗೆ ವಿತರಿಸಿದರು. ಈ ಬಾರಿ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಕೂಟದ ಎಲ್ಲ ವಿದ್ಯಾರ್ಥಿಗಳಿಗೂ ಕೂಟದ ಹಿರಿಯ ಸದಸ್ಯರಾದ ಶ್ರೀಮತಿ ಕೃಷ್ಣವೇಣಿರವರು ನಗದು ಬಹುಮಾನ ನೀಡಿ ಮಕ್ಕಳಿಗೆ ಆಶೀರ್ವಾದ ಮಾಡಿದರು. ಆಟೋಟಗಳಲ್ಲಿ ಭಾಗವಹಿಸಿ ಗೆದ್ದವರಿಗೆಲ್ಲಾ ಬಹುಮಾನವನ್ನು ನೀಡಲಾಯಿತು.ಈ ಬಹುಮಾನವನ್ನು  ಶ್ರೀಮತಿ ವಸಂತಲಕ್ಷ್ಮಿ ಕುಟುಂಬವು ಪ್ರಾಯೋಜಿಸಿತ್ತು.ದಶಮಾನೋತ್ಸವದ ಸಂದರ್ಭದ ಸ್ಮರಣಾರ್ಥ ಶ್ರೀಮತಿ ಬಿ.ಕೆ.ಜಯಲಕ್ಷ್ಮಿ- ಶ್ರೀಮತಿ ಬಿ.ಕೆ.ಚಂಚುಲಕ್ಷ್ಮಿ ಕುಟುಂಬದವರಿಂದ  ನೆನಪಿನ ಕಾಣಿಕೆ ವಿತರಿಸಲಾಯಿತು. ನಂತರ ಅಧ್ಯಕ್ಷ ಭಾಷಣದಲ್ಲಿ ಕೂಟದ ಆಶಯಗಳು, ಸಾಗುತ್ತಿರುವ ಹಾದಿ,ಸಾಧಿಸಬೇಕಾದ ಅಂಶಗಳ ಕುರಿತು ನಾ.ನಾರಾಯಣರವರು ಮಾತನಾಡಿದರು.
  ವಾರ್ಷಿಕ ಸರ್ವಸದಸ್ಯರ ಸಭೆಯನ್ನು ತಮ್ಮ ಮನೆಯಲ್ಲಿ ನಡೆಸಲು ಅನುವು  ಮಾಡಿಕೊಟ್ಟ ಹಾಗೂ ಸಂಜೆಯ ಕಾಫಿ ವಗೈರೆಗಳ ಆತಿಥ್ಯನೀಡಿದ್ದಕ್ಕಾಗಿ ಶ್ರೀ ಬಿ.ಕೆ.ರಮೇಶ ರವರನ್ನು ವಿಶೇಷವಾಗಿ ಅಭಿನಂದಿಸುತ್ತಾ, ಶ್ರೀ ವಿಕ್ರಮ ಪದಕಿ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಬಿ.ಕೆ.ಜಯಲಕ್ಷ್ಮಿ ಶ್ರೀಮತಿ ಬಿ.ಕೆ.ಚಂಚುಲಕ್ಷ್ಮಿ ಯವರ ಮಂಗಳದೊಂದಿಗೆ ವಾರ್ಷಿಕ ಸರ್ವಸದಸ್ಯರ ಸಭೆಯು ಯಶಸ್ವಿಯಾಗಿ ಸಂಪನ್ನವಾಯಿತು.
 
ವಾರ್ಷಿಕ ಸರ್ವಸದಸ್ಯರ ಸಭೆ ಫೋಟೋಗಳು

ಪ್ರಾರ್ಥನೆ-ಕು||ಅಭಿಘ್ನ



'ಬೇರು ಬಿಳಲು' ಸ್ಮರಣಸಂಚಿಕೆ ಬಿಡುಗಡೆ

ಶ್ರೀಮತಿ ವಿಮಲಮ್ಮನವರಿಂದ

ಶ್ರೀಮತಿ ಕೃಷ್ಣವೇಣಿರವರಿಗೆ ಸನ್ಮಾನ


ಕಿರಿಯ-ಹಿರಿಯರ ಆಟೋಟಗಳು

 






ಕಿರಿಯ-ಹಿರಿಯರ ಆಟೋಟಗಳು


  ವೃತ್ತಿ-ಪ್ರವೃತ್ತಿ ಮಾಲಿಕೆ ಸಂವಾದ


ಕು||ಸಿರಿ ಕು||ಅನನ್ಯ ರಿಂದ ನೃತ್ಯ ಕಾರ್ಯಕ್ರಮ
  ವೃತ್ತಿ-ಪ್ರವೃತ್ತಿ ಮಾಲಿಕೆ ಸಂವಾದ


ಉತ್ತೇಜಕ ನಗದು ಬಹುಮಾನ ಪುರಸ್ಕಾರ

ಶ್ರೀಮತಿ ಕೃಷ್ಣವೇಣಿ ರವರಿಂದ


ಉತ್ತೇಜಕ ನಗದು ಬಹುಮಾನ ಪುರಸ್ಕಾರ

ಶ್ರೀಮತಿ ಕೃಷ್ಣವೇಣಿ ರವರಿಂದ

 



*********************ಶುಭವಾಗಲಿ ವಂದನೆಗಳು**********************************